ಲಲಿತಾ ಬಿ.ಟಿ.ನಾಯಕ್ - ಕನ್ನಡದ ಮಹಿಳಾ ಬಂಡಾಯ ಸಾಹಿತಿಗಳಲ್ಲಿ ಪ್ರಮುಖರು. ಲಲಿತಾ ನಾಯಕ್ ರ ಕಥೆ, ಕಾದಂಬರಿ, ನಾಟಕಗಳೆಲ್ಲದರಲ್ಲಿ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯದ ದನಿ, ದಲಿತರ ನೋವುಗಳಿವೆ. ಸಂಘಟಕರಾಗಿಯು ಇವರು ಗಮನ ಸೆಳೆದಿದ್ದಾರೆ ಸಾಮಾಜಿಕ ಕಳಕಳಿ, ಕಾಳಜಿಯನ್ನು ಇವರು ಹೊಂದಿದ್ದಾರೆ == ಜನನ, ವಿದ್ಯಾಭ್ಯಾಸ == ಚಿಕ್ಕಮಗಳೂರುಜಿಲ್ಲೆಯ, ಕಡೂರು ತಾಲೂಕಿನ ತಂಗಲಿ ತಾಂಡ್ಯಾ ಇವರ ಹುಟ್ಟಿದೂರು ತಂದೆ ಬಾಲಾಜಿ ನಾಯ್ಕ, ತಾಯಿ ಗಂಗಾಬಾಯಿ. ಕಡುಬಡತನದ ಬಾಲ್ಯ ಲಲಿತಾ ನಾಯಕ್ ಅವರದಾಗಿತ್ತೆಂದು, ಆವರ ಕೆಲವು ಬರಹಗಳಿಂದ ತಿಳಿದು ಬರುತ್ತದೆ. ತಂದೆ ಮತ್ತು ಅಣ್ಣನ ಪ್ರೋತ್ಸಾಹದಿಂದ ಪ್ರೌಢಶಾಲೆಯ ನಂತರ ಮನೆಯಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುತ್ತಾರೆ. == ವೃತ್ತಿಜೀವನ == ಲಂಕೇಶ್ ಪತ್ರಿಕೆಯಲ್ಲಿ ೧೯೮೨ ರಿಂದ ವರದಿಗಾರ್ತಿಯಾಗಿ ದುಡಿದ ಇವರ ಅನೇಕ ಲೇಖನ, ಕತೆ, ಕವನಗಳು ಆ ಪತ್ರಿಕೆಯಲ್ಲಿ ಪ್ರಕಟಗೊಂಡವು. ಇವರು ರಚಿಸಿದ ನಾಟಕಗಳು ಧಾರವಾಡದ ಬಾನುಲಿಕೇಂದ್ರದಿಂದ ಪ್ರಸಾರವಾಗಿವೆ. == ರಾಜಕೀಯ ಜೀವನ == 1986ರ ವರ್ಷದಲ್ಲಿ ರಾಮಕೃಷ್ಣ ಹೆಗಡೆಯವರ ಆಹ್ವಾನದ ಮೇರೆಗೆ ರಾಜಕೀಯ ಪ್ರವೇಶ ಮಾಡಿದ ಲಲಿತಾ ನಾಯಕ್ ರು, ೧೯೮೬ರಲ್ಲಿ ರಾಜಕೀಯ ಪ್ರವೇಶಿಸಿ, ೧೯೮೬ರಿಂದ ೧೯೯೨ ರ ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿಯೂ ೧೯೯೪ರಿಂದ ೧೯೯೯ರ ವರೆಗೆ ವಿಧಾನಸಭೆಯಲ್ಲಿ ಶಾಸಕಿಯಾಗಿ, ಮಂತ್ರಿಯಾಗಿ, ಕರ್ನಾಟಕ ಬಾಲಭವನ ಸೊಸೈಟಿ, ಕರ್ನಾಟಕ ಜನತಾದಳ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ, ರಾಜಕೀಯ ವ್ಯವಹಾರ ಸಮಿತಿ ಸದಸ್ಯೆಯಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. == ಕೃತಿಗಳು == === ಕಥಾಸಂಕಲನ === ಹಬ್ಬ ಮತ್ತು ಬಲಿ === ಕಾದಂಬರಿ === ನೆಲೆ-ಬೆಲೆ ಗತಿ === ರೇಡಿಯೊ ನಾಟಕ ಸಂಕಲನ === ಚಂದ್ರ ಪರಾಭವ === ಮಕ್ಕಳ ಸಾಹಿತ್ಯ === ಭರವಸೆ === ಕವನ ಸಂಕಲನ === ನಂ ರೂಪ್ಲಿ ಇದೇ ಕೂಗು ಮತ್ತೆ ಮತ್ತೆ ಒಡಲಬೇಗೆ ಸವಾಸೇರು ಬಿದಿರು ಮೆಳೆ ಕಂಟಿಯಲಿ == ಗೌರವ-ಪುರಸ್ಕಾರ == ಇವರ ‘ನೆಲೆ-ಬೆಲೆ’ ಕಾದಂಬರಿಗೆ ೧೯೮೧ರಲ್ಲಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ. 'ಗತಿ' ಕಾದಂಬರಿಯು ಕರ್ನಾಟಕ ವಿವಿಯ ೩ನೇ ವರ್ಷದ ಬಿ.ಎ ತರಗತಿಗೆ, 'ಹಬ್ಬ ಮತ್ತು ಬಲಿ' ಕಥಾಸಂಕಲನವು ಗುಲ್ಬರ್ಗಾ ವಿವಿಯ ಎಂ.ಎ ತರಗತಿಗೆ ಪಠ್ಯಪುಸ್ತಕಗಳಾಗಿವೆ. ಅದೇ ಕಲಬುರ್ಗಿ ವಿ.ವಿಯ ಕಲಾ ವಿಷಯದ ಮೊದಲ ವರ್ಷದ ಕಾವ್ಯಸಂಗಮ ಪಠ್ಯಪುಸ್ತಕದಲ್ಲಿ ಇವರ ಎಂಟು ಕವನಗಳು ಸೇರಿವೆ. == ಪ್ರಶಸ್ತಿಗಳು == ಇಷ್ಟಲ್ಲದೆ ಇವರು ಉತ್ತಮ ಶಾಸಕಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜೀವಗಾಂಧಿ ಏಕತಾ ಪ್ರಶಸ್ತಿ, ಶ್ರೀಮತಿ ಸಾವಿತ್ರಮ್ಮ ದೇಜಗೌ ಮಹಿಳಾ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಮಹಿಳಾರತ್ನ ಪ್ರಶಸ್ತಿ, ಕಿರಣಪ್ರಭಾ ಪ್ರಶಸ್ತಿ, ಕಾಯಕ ಸಮ್ಮಾನ್ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸಮಾಜ ಸೇವಾರತ್ನ ಪ್ರಶಸ್ತಿ ಮುಂತಾದವುಗಳಿಂದ ಪುರಸ್ಕೃತರಾಗಿದ್ದಾರೆ. == ಉಲ್ಲೇಖಗಳು ==